ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಯ ನಡುವೆ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಅಲ್ಪಮತಕ್ಕೆ ಕುಸಿಯುವ ಭೀತಿ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಗೊಂದಲಕ್ಕೊಳಗಾಗಿರುವ ರಾಮನಗರದ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರು ಕಾರ್ಯಕ್ರಮವೊಂದರ ಫ್ಲೆಕ್ಸ್, ಕಟೌಟ್ಗಳಲ್ಲಿ ಕುಮಾರಸ್ವಾಮಿಯವರ ಹೆಸರಿನೊಂದಿಗೆ ‘ಮುಖ್ಯಮಂತ್ರಿ’ ಪದವನ್ನು ಮುದ್ರಿಸದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ರಾಮನಗರದಲ್ಲಿ ಜುಲೈ 23ರಂದು ಆಚರಿಸಲಾಗುತ್ತಿರುವ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಪ್ರಯುಕ್ತ ನಡೆಯುವ ಸಂಗೀತ ನೃತ್ಯ ಸಂಭ್ರಮಕ್ಕೆ ಸ್ವಾಗತ ಕೋರುವ ಕುಮಾರಸ್ವಾಮಿ ಭಾವ ಚಿತ್ರವಿರುವ ದೊಡ್ಡ ದೊಡ್ಡ ಫ್ಲೆಕ್ಸ್ ಮತ್ತು ಕಟೌಟ್ಗಳನ್ನು ನಗರದ ಪ್ರಮುಖ ವೃತ್ತ ಹಾಗೂ ರಸ್ತೆ ಬದಿಯಲ್ಲಿ ಅಳವಡಿಸಲಾಗುತ್ತಿದೆ.
ಅವುಗಳಲ್ಲಿ ‘ಎಚ್.ಡಿ.ಕುಮಾರಸ್ವಾಮಿ ಮತ್ತು ಅಭಿಮಾನಿಗಳು’ ಎಂದು ಉಲ್ಲೇಖಿಸಲಾಗಿದೆಯೇ ಹೊರತು ಎಲ್ಲಿಯೂ ‘ಮುಖ್ಯಮಂತ್ರಿಗಳು’ ಎಂಬ ಪದ ಇಲ್ಲದಿರುವುದು ವಿವಾದಕ್ಕೆ ಕಾರಣವಾಗಿದೆ.
ಸೋಮವಾರದ ವಿಶ್ವಾಸ ಮತಯಾಚನೆ ನಂತರ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ ಉಳಿಯುತ್ತಾರೊ ಇಲ್ಲವೊ ಎಂಬ ಅನುಮಾನ ಬಹುಶಃ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರಿಗೂ ಕಾಡತೊಡಗಿದೆ ಎನ್ನಲಾಗಿದೆ.

Comments
Post a Comment