ಜೆಡಿಎಸ್ ಮುಂದೆ ನಾಮಪತ್ರ ಸಲ್ಲಿಸಲು ಹೆದರಿದ ಬಿಜೆಪಿ, ಕಾಂಗ್ರೆಸ್ , ಭರ್ಜರಿ ಜಯದೊಂದಿಗೆ ಅಧ್ಯಕ್ಷ ಸ್ಥಾನ ಪಡೆದುಕೊಂಡ ಜೆಡಿಎಸ್ ನಾಯಕ
ಬೋರೇಗೌಡನ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜೆಡಿಎಸ್ ಬೆಂಬಲಿತ ನರಸಿಂಹಮೂರ್ತಿ ಅಧ್ಯಕ್ಷರಾಗಿ, ಸದಾಶಿವಯ್ಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕಿನ ಕಲ್ಯಾ ಗ್ರಾಪಂ ವ್ಯಾಪ್ತಿಯ ಬೋರೇಗೌಡನಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕೆಲವು ದಿನಗಳ ಹಿಂದೆ ನಿರ್ದೇಶಕರುಗಳ ಆಯ್ಕೆ ನಡೆದಿದ್ದು, ಶುಕ್ರವಾರ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಘೋಷಣೆಯಾಗಿತ್ತು.
ನರಸಿಂಹಮೂರ್ತಿ ಹಾಗೂ ಸದಾಶಿವಯ್ಯ ಹೊರತುಪಡಿಸಿ ಬೇರೆ ಯಾರೂ ಸಹ ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷರಾಗಿ ನರಸಿಂಹಮೂರ್ತಿ, ಉಪಾಧ್ಯಕ್ಷರಾಗಿ ಸದಾಶಿವಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಉಮೇಶ್ ಘೋಷಿಸಿದರು.
ಈ ವೇಳೆ ನೂತನ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಬೋರೇಗೌಡನಪಾಳ್ಯ ಎಂಪಿಸಿಎಸ್ನಲ್ಲಿ 45 ಹಾಲು ಉತ್ಪಾದಕ ಸದಸ್ಯರಿದ್ದು, ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಒಟ್ಟು 400 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ರೈತರಿಗೆ ಒಳ್ಳೆಯದಾಗಬೇಕು, ಸಂಘ ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗಬೇಕು ಎಂಬುದು ತಮ್ಮ ಆಶಯವಾಗಿದೆ. ಅಲ್ಲದೇ ಬಮೂಲ್ ಹಾಗೂ ಸರಕಾರದಿಂದ ಬರುವ ಸೌಲಭ್ಯಗಳನ್ನು ಪ್ರತಿಯೊಬ್ಬ ಸದಸ್ಯನಿಗೂ ಸಮರ್ಪಕವಾಗಿ ವಿತರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಹಾಗೂ ಕಲ್ಯಾ ಗ್ರಾಪಂ ಮಾಜಿ ಅಧ್ಯಕ್ಷ ಚಿಕ್ಕಣ್ಣ, ನಿರ್ದೇಶಕರಾದ ಬಿ.ಇ.ರುದ್ರೇಶ್, ಬಿ.ಎಸ್. ಬಸವರಾಜು, ವೀರೇಶ್, ಎಂ.ಪಿ. ಗಂಗಾಧರಯ್ಯ, ಕೆ. ಗಂಗಾಧರಯ್ಯ, ಕೆ.ಎಂ. ನಾಗರಾಜು, ಕೆ.ಎಸ್. ಶಿವಣ್ಣ ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್, ಕಾರ್ಯದರ್ಶಿ ಮಂಜುನಾಥ್ ಮತ್ತಿತರರು ಹಾಜರಿದ್ದರು.

Comments
Post a Comment